ಹಿರಿಯ ಚಲನಚಿತ್ರ ಅಭಿನೇತ್ರಿ ಡಾ.ಭಾರತಿ ವಿಷ್ಣುವರ್ಧನರವರು ಇದೀಗ ಯುವಸಾಮ್ರಾಟ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಹೊಸಬರ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ತಮ್ಮ ಪ್ರೀತಿಯ ಕರೆಗೆ ಓ ಗೊಟ್ಟು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದ ಡಾ.ಭಾರತಿ ವಿಷ್ಣುವರ್ಧನರವರ ತುಂಬು ಸಹಕಾರಕ್ಕೆ ವಿನಯ ಪೂರ್ವಕ ಗೌರವ ಸಮರ್ಪಿಸಿದ್ದಾರೆ ಯುವಸಾಮ್ರಾಟ್ ಚಿತ್ರದ ರುವಾರಿಯಾದ ಹಿರಿಯ ಚಲನಚಿತ್ರ ಪತ್ರಕರ್ತ ನಂದಕುಮಾರ್ ಹಾಗೂ ಅವರ ಕುಟುಂಬ.
ಹಿರಿಯ ಪುತ್ರ ಕಿರಣ್ ಕುಮಾರ್ ಅವರನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸುವ ಆಶಯದಿಂದ ಶ್ರೀ ವರಲಕ್ಷ್ಮಿ ಫಿಲಂಸ್ ಬ್ಯಾನರಿನಡಿಯಲ್ಲಿ ನಂದಕುಮಾರ್ ಅವರ ಪತ್ನಿ ಶ್ರೀಮತಿ ವರಲಕ್ಷ್ಮಿ ನಂದಕುಮಾರ್ ಅವರು ನಿರ್ಮಿಸುತ್ತಿರುವ ಯುವಸಾಮ್ರಾಟ್ ಚಿತ್ರವನ್ನು ಕಿರಿಯ ಪುತ್ರ ಯಶವಂತ್ ಕುಮಾರ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಮೊದಲ ಬಾರಿಗೆ ಇವರೇ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ನಂದಕುಮಾರ್ ಅವರು ಚಿತ್ರದ ನಿರ್ಮಾಣ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಾಯಕ ಪ್ರೇಮ್ ಅವರು ಈ ಚಿತ್ರಕ್ಕಾಗಿ ಒಂದು ಹಾಡನ್ನು ಇಂಪಾಗಿ ಹಾಡಿ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಾಡಿನ ಚಿತ್ರೀಕರಣವೂ ಸೊಗಸಾಗಿ ಮೂಡಿಬಂದಿದೆ.
ಉಕ್ರೇನ್ ಚೆಲುವೆ ಸ್ನಿಷಾನ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ, ಎಂ.ಎಸ್.ಉಮೇಶ್, ಕೋಟೆ ಪ್ರಭಾಕರ್, ನಾಗೇಂದ್ರ ಅರಸ್, ನೆ.ಲ ನರೇಂದ್ರಬಾಬು, ಪಿ.ಎಲ್.ವೆಂಕಟರಾಮರೆಡ್ಡಿ, ಸಿಂಗರ್ ಶ್ರೀನಿವಾಸ್, ಮೋಹನ್ ಜುನೇಜ, ತನುಜ, ಕವನ, ಕುಮುದ, ರಾಮ್ದೇವ್, ವೆಂಕಟ್ ಟೆಕೊಂಡ, ರೇಣು, ದರ್ಶನ್ ಹುಣಸೂರು, ಭಾರತಿ ಶರ್ಮ, ಕೃತಿ ಗೌಡ, ಭಾವನಾ ಚಂದ್ರ, ಬಾಬು, ಸಂಪಂಗಿ ಮುಂತಾದವರು ನಟಿಸಿದ್ದಾರೆ.
ಯುವಸಾಮ್ರಾಟ್ ಚಿತ್ರದ ಛಾಯಾಗ್ರಾಹಕರು ಅರುಣ್ ಸುರೇಶ್. ಸಂಕಲನ: ಶಿವರಾಜ್ ಮೆಹು, ಸಾಹಸ: ರಾಮ್ದೇವ್ (ಹ್ಯಾರಿಸ್ ಜಾನಿ), ನಾಗ್ಕೀರ್ತಿ ಟೆಕೊಂಡೊ, ನೃತ್ಯ ನಿರ್ದೇಶನ ರಾಜು, ರಾಜ್ಕಮಲ್, ವಸ್ತ್ರವಿನ್ಯಾಸ: ಗಂಡಸಿ ನಾಗರಾಜ್, ಕಲೆ: ಕನಕ, ನಿರ್ಮಾಣ ನಿರ್ವಹಣೆ: ಭರತ್, ಥಾಮಸ್, ವರ್ಣಾಲಂಕಾರ ಚಂದ್ರು. ಪತ್ರಿಕಾ ಪ್ರಚಾರ: ನಾಗೇಂದ್ರ, ಸ್ಥಿರಚಿತ್ರಣ: ಬದ್ರಿ ಅವರದು.